ಗುರುವಾರ, ನವೆಂಬರ್ 26, 2015

ಆಳ್ವಾಸ್ ನುಡಿಸಿರಿ – 2015 ಅಧ್ಯಕ್ಷರ ಭಾಷಣ


ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ

ನಾನು ನನ್ನ ಸಾಹಿತ್ಯಶಕ್ತಿಯನ್ನು ಕಂಡುಕೊಂಡುದು ಈಗ್ಗೆ ಸುಮಾರು 60-65 ವರ್ಷಗಳಷ್ಟು ಹಿಂದೆ, 1950-52ರಲ್ಲಿ, ಕನ್ನಡ ಬಿ.ಎ. ಆನರ್ಸ್ ತರಗತಿಯ ವಿದ್ಯಾರ್ಥಿಯಾಗಿದ್ದಾಗ. ಇದಕ್ಕೆ ನಿಮಿತ್ತವಾದವರು ನಮ್ಮ ಕನ್ನಡ ಅಧ್ಯಾಪಕರಾಗಿದ್ದ ಎಸ್.ವಿ. ಪರಮೇಶ್ವರ ಭಟ್ಟರು. ಅವರು ನಮಗೆ ರತ್ನಾಕರನ `ಭರತೇಶವೈಭವ'ವನ್ನು ಪಾಠ ಮಾಡುತ್ತಿದ್ದರು. ನಾನು `ರತ್ನಾಕರಕವಿಯ ವರ್ಣನಾನೈಪುಣ್ಯ' ಎಂಬ ಪ್ರಬಂಧವನ್ನು ಬರೆದು ಅವರಿಗೆ ತೋರಿಸಿದೆ. ಅವರು ಓದಿ, ಮೆಚ್ಚಿಕೊಂಡು, ತರಗತಿಯಲ್ಲೇ ಸಹಪಾಠಿಗಳ ಎದುರಿನಲ್ಲಿಯೂ ಓದಿದರು. ಅಲ್ಲದೆ ತಾವೇ ಶಿವಮೊಗ್ಗದ `ಮಿತ್ರ' ಎಂಬ ಪತ್ರಿಕೆಗೆ ಪ್ರಕಟನೆಗೆಂದು ಕಳಿಸಿದರು. ಅದು ನನ್ನಲ್ಲಿ ಒಬ್ಬ ಬರಹಗಾರನಿದ್ದಾನೆ ಎಂದು ಗುರುತಿಸಿಕೊಂಡ ಶುಭೋದಯದ ಸಂದರ್ಭ.
ರತ್ನಾಕರ ಕವಿ ಮೂಡಬಿದರೆಯವನು. ಈಗ 11 ವರ್ಷಗಳಿಂದ ವೈಭವದಿಂದ ನಡೆಯುತ್ತ ಬಂದಿರುವ `ನುಡಿಸಿರಿ'ಯ ಸಿರಿಮುಡಿ ಮೂಡಬಿದರೆ; ಡಾ. ಮೋಹನ ಆಳ್ವರೂ ಅಭಿಮಾನಿ ಮಿತ್ರರೂ 2015ರ ನುಡಿಸಿರಿಯ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷನೆಂದು ಆರಿಸಿದ್ದಾರೆ, ಆಹ್ವಾನಿಸಿದ್ದಾರೆ. ನಾನು ಹೇಳಿದ ಶುಭೋದಯದ ಸಂದರ್ಭ ಎನ್ನುವುದು ಉದಯರವಿ ನಡುನೆತ್ತಿಗೆ ಬಂದು ಪ್ರಖರವಾಗಿ ಜ್ವಲಿಸುವಂತೆ ನನ್ನನ್ನು ತಮ್ಮೆದುರು ತಂದು ನಿಲ್ಲಿಸಿ ಪರಿಣಾಮಗೊಂಡಿದೆ. ನಾನು ನುಡಿಸಿರಿಯ ಶ್ರೀಪುರುಷ, ನಡೆಸಿರಿಯ ಮೋಹನ ಆಳ್ವರಿಗೆ, ಅವರ ಸಲಹಾಮಂಡಲಿಯ ಮಾನ್ಯಮಿತ್ರರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ.
ಹಲವು ವರ್ಷಗಳ ಹಿಂದೆ ಮೂಡಬಿದರೆಯಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತು ರತ್ನಾಕರವರ್ಣಿಯ ವಿಷಯವಾಗಿ ಒಂದು ವಿಚಾರಸಂಕಿರಣವನ್ನು ಏರ್ಪಡಿಸಿತ್ತು. ಆಗ ನಾನು `ಸಾಂಗತ್ಯಗ್ರಂಥಗಳಲ್ಲಿ ಭರತೇಶವೈಭವದ ಸ್ಥಾನ' ಎಂಬ ಪ್ರಬಂಧವನ್ನು ಮಂಡಿಸಿದೆ. ಇಲ್ಲಿಯೇ 2005ರಲ್ಲಿ ಹಿರಿಯ ಮಿತ್ರರೊಂದಿಗೆ ನುಡಿಸಿರಿಯ ಸನ್ಮಾನದ ಸೌಭಾಗ್ಯವನ್ನೂ ಪಡೆದೆ.
ನಮ್ಮ ಕಾಲದ ಮಹಾಕವಿ ಕುವೆಂಪು ಅವರ ಮಾತು ಇದು: (1) "ಕಾವ್ಯ, ವಸ್ತು ಮತ್ತು ದರ್ಶನದ ದೃಷ್ಟಿಯಿಂದ ನೋಡುವುದಾದರೆ ಭರತೇಶವೈಭವದ ಕರ್ತೃವಾದ ರತ್ನಾಕರವರ್ಣಿ ಹಿಂದಿನ ಮಹಾಕವಿಗಳ ಪಂಕ್ತಿಯಲ್ಲಿ ಪ್ರಥಮಶ್ರೇಣಿಗೆ ಏರುವಂತೆ ತೋರುತ್ತದೆ". (2) "ಭರತೇಶವೈಭವದಲ್ಲಿ ತ್ಯಾಗಭೋಗಗಳ ಸಮನ್ವಯದ ಯೋಗದರ್ಶನ ವನ್ನು ಕವಿ ಸುಂದರವಾಗಿ ಪ್ರತಿಮಿಸಿದ್ದಾನೆ. ಅಷ್ಟೆ ಅಲ್ಲ, ಕವಿ ಆದರ್ಶವನ್ನು ಭರತನ ಜೀವನದಲ್ಲಿ ಮಾತ್ರವೇ ಅಲ್ಲದೆ ಇಡೀ ಕಾವ್ಯದ ವಿವರ ವಿವರಗಳಲ್ಲೆಲ್ಲ ಬುದ್ಧಿಪೂರ್ವಕವಾಗಿ ಪ್ರತಿಮಿಸಿರುವುದನ್ನು ನೋಡಿದರಂತೂ ಅಂತಹ ಕಾವ್ಯಸೃಷ್ಟಿ ಜಗತ್ತಿನ ಮತ್ತಾವ ಸಾಹಿತ್ಯದಲ್ಲೂ ಆಗಿರುವಂತೆ ಕಾಣುವುದಿಲ್ಲ. ಆ ದೃಷ್ಟಿಯಿಂದ ಈ ಕೃತಿ ಜಗತ್‍ಕೃತಿ". (3) "ಹಿಂದಿನ ಕನ್ನಡ ಸಾಹಿತ್ಯದಲ್ಲಿ ಹಳೆಯ ಕಥೆ ಮತ್ತು ವಿಷಯ ಇವುಗಳಿಂದ ಅತ್ಯಂತ ಸ್ವತಂತ್ರವಾದ ದರ್ಶನವಸ್ತುವನ್ನು ಸೃಷ್ಟಿಸಿ ತನ್ನದೆ ಆದ ಒಂದು ನೂತನಮಾರ್ಗದಿಂದ ಭರತೇಶವೈಭವದಂತಹ ಬೃಹತ್ಪ್ರಮಾಣದ ಮಹಾಕೃತಿಯನ್ನಾಗಿಸಿದ ಮಹಾಕವಿಯ ಕೀರ್ತಿ ರತ್ನಾಕರವರ್ಣಿಗೊಬ್ಬನಿಗೆ ಸಲ್ಲುತ್ತದೆ."

ಹೊಸತನದ ಹುಡುಕಾಟ: ಸಾಹಿತ್ಯದ ಮೂರು ಗಣಿಗಳು

ಅಜ್ಞಾತಸಾಹಿತ್ಯ, ಅನುಪಲಬ್ಧಸಾಹಿತ್ಯ ಮತ್ತು ಅಲಕ್ಷಿತಸಾಹಿತ್ಯ ಇವನ್ನು ಮೂರು ಗಣಿಗಳೆಂದು ನಾನು ಗಣಿಸಿದ್ದೇನೆ. ಈ ವಿಷಯದಲ್ಲಿ ಕೆಲವರು ಗಣ್ಯವಿದ್ವಾಂಸರು ಸ್ವಲ್ಪ ಕೆಲಸ ಮಾಡಿದ್ದಾರೆ. ಈ ಕೆಲಸ ಮುಂದುವರಿಯಬೇಕಾಗಿದೆ.
ಅಜ್ಞಾತಸಾಹಿತ್ಯ: `ಕವಿರಾಜಮಾರ್ಗ'ದಲ್ಲಿ ಶೋಧಿಸತಕ್ಕ ಇನ್ನೂ ಹಲವು ವಿಷಯಗಳಿವೆ. ಸಾಹಿತ್ಯಪ್ರಕಾರಗಳಾದ ಚತ್ತಾಣ ಬೆದಂಡೆ ಗದ್ಯಕಥೆಗಳ ಸ್ವರೂಪ, ಮಾದರಿಗಳು ಅವುಗಳಲ್ಲಿ ಒಂದು. ಹಾಗೆಯೇ ಕಾವ್ಯಾವಲೋಕನದಲ್ಲಿ ಉಕ್ತವಾಗಿರುವ, ಇಡುಕುಂಗಬ್ಬ (=ಮುಕ್ತಕ), ಪದ, ಮೆಲ್ವಾಡು, ಪ್ರಬಂಧ, ಪಾಡು, ಪಾಡುಗಬ್ಬ, ಮೆಲ್ವಾಡು, ಬೆದಂಡೆಗಬ್ಬ, ಬಾಜನೆಗಬ್ಬ ಎಂದಿರುವ ಸಾಹಿತ್ಯಪ್ರಕಾರಗಳ ರೂಪ ಮತ್ತು ಪ್ರಯೋಗಗಳ ಸಂಬಂಧವಾಗಿ ಈ ಶೋಧ ಮುನ್ನಡೆದು, ಮಾದರಿಗಳನ್ನು ಗುರುತಿಸಬಹುದೇ ಅಥವಾ ಸಣ್ಣ ಪ್ರಮಾಣದವು ಪ್ರಬಂಧಗಳ ಮೈಯಲ್ಲಿ ಅಡಗಿಕೊಂಡಿವೆಯೇ ಕಂಡುಹಿಡಿಯ ಬೇಕಾಗಿದೆ.
ಹಾಗೆಯೇ ಕನ್ನಡದಲ್ಲಿ `ಕವಿರಾಜಮಾರ್ಗ', `ಕಾವ್ಯಾವಲೋಕನ' ಮೊದಲುಗೊಂಡು ಪ್ರಾಚೀನ ಅಲಂಕಾರಶಾಸ್ತ್ರ ಗ್ರಂಥಗಳಲ್ಲಿ, `ಸೂಕ್ತಿಸುಧಾರ್ಣವ', `ಕಾವ್ಯಸಾರ' ಮೊದಲಾದ ಪದ್ಯಸಂಕಲನಗಳಲ್ಲಿ ಚದುರಿಹೋಗಿರುವ ಬಹುಸಂಖ್ಯೆಯ ಲಕ್ಷ್ಯಪದ್ಯಗಳ ಹಾಗೂ ಉದಾಹರಣೆಗಳ ಅಜ್ಞಾತಮೂಲಗಳನ್ನು  ಶೋಧಿಸಿ, ಅವುಗಳ ಕರ್ತೃತ್ವ ಆಕರಗಳನ್ನೂ ಬೌದ್ಧಿಕ ನೆಲೆಯಲ್ಲಿ ಕಥಾವಸ್ತು ಸಂಸ್ಕøತಿ ಇತಿಹಾಸ ಮೊದಲಾದ ವಿವರಗಳನ್ನೂ ಶೋಧಿಸಬೇಕಾಗಿದೆ. ಸುಳಿವು ಸುದ್ದಿಗಳನ್ನು ಕೊಡದೆ ನಷ್ಟಪ್ರಾಯವಾಗಿರುವ ಸಾಹಿತ್ಯಿಕ ಸಂಗತಿಗಳೇನಿವೆಯೋ ಅವನ್ನು ಅನುಮಾನಪ್ರಮಾಣದ ಬಲದಿಂದ ಕಟ್ಟಿಕೊಡುವುದು ಸಾಧ್ಯವೇ ಹೇಗೆ ಎನ್ನುವುದನ್ನು ವಿವೇಚಿಸಬೇಕು. ಆರ್. ನರಸಿಂಹಾಚಾರ್ಯರು ಮೊದಲು ಗೊಂಡು ಕೆಲವರು ಈ ದಿಕ್ಕಿನಲ್ಲಿ ಕೆಲಸಮಾಡಿದ್ದರೂ ಪ್ರತ್ಯೇಕ ಪ್ರಾಮುಖ್ಯದ ವಿಷಯವಾಗಿ ಶೋಧ ನಡೆಯಬೇಕಾಗಿದೆ.

ವ್ಯಕ್ತಿಸ್ವಾತಂತ್ರ್ಯ - ಅಭಿವ್ಯಕ್ತಿಸ್ವಾತಂತ್ರ್ಯ
ಸಹಜೀವರಿಗೆ ಯಾವುದೇ ಬಾಧೆಯಾಗದ ಹಾಗೆ ಇರುತ್ತ, ತನ್ನ ಬದುಕಿನಲ್ಲಿ ನೆಮ್ಮದಿಯಿಂದ ಬಾಳುವುದು ವ್ಯಕ್ತಿಸ್ವಾತಂತ್ರ್ಯ. ಇದು ನಡೆವಳಿಕೆಯ ಮಾತು. ಈ ನಡೆವಳಿಕೆಗೆ ಚಾಲನೆ, ಶಕ್ತಿ ಬರುವುದು ನಮ್ಮ ಅಭಿವ್ಯಕ್ತಿಯಲ್ಲಿ ಕೂಡ ಇದು ಕಂಡುಬರುತ್ತಿದ್ದರೆ ಮಾತ್ರ ಸಾಧ್ಯ. ಈ ಅಭಿವ್ಯಕ್ತಿಯ ಸ್ವಾತಂತ್ರ್ಯ ವ್ಯಕ್ತಿಸ್ವಾತಂತ್ರ್ಯದ ಹಾಗೆ ಪ್ರತಿಯೊಬ್ಬರಿಗೂ ದತ್ತÀವಾದ್ದು, ನಿಜ. ಆದರೆ ಇವಕ್ಕೆ ಗಡಿರೇಖೆಗಳು, ಗೊತ್ತುಪಾಡುಗಳು ಇರುವುದಿಲ್ಲವೇ ಎನ್ನುವುದು ಮುಖ್ಯಪ್ರಶ್ನೆ. `ಇಲ್ಲ' ಎನ್ನುವುದಾದರೆ ಸ್ವಾಚ್ಛಂದ್ಯ ಸಂಘÀರ್ಷಗಳಿಗೆ ಕರೆದು ಮಣೆಹಾಕಿದಂತೆಯೇ ಸರಿ. `ಇದೆ' ಎನ್ನುವುದಾದರೆ, ಅವನ್ನು ಗುರುತಿಸುವುದು ಈಗಿನ ಸಂದರ್ಭಗಳ ಒತ್ತಡದಲ್ಲಿ ಅವಶ್ಯವಾಗುತ್ತದೆ. ವಿದ್ವತ್ತೆಯ, ವಿಮರ್ಶೆಯ ವಿಷಯಗಳು ಬಂದಾಗ ಬೌದ್ಧಿಕ, ಶೈಕ್ಷಣಿಕ ಆದ ನೆಲೆಗಳಲ್ಲಿ ನಡೆಯುವ ವಾಗ್ವಾದಗಳು ಒಟ್ಟು ಸಮಾಜದ ಸುಸ್ಥಿತಿಯ ದೃಷ್ಟಿಯಿಂದ ಅಷ್ಟು ಘಾತಕವಾದ ಪರಿಣಾಮಗಳಿಗೆ ಅವಕಾಶ ಮಾಡಲಾರವು. ಏಕೆಂದರೆ ಅದು ಒಟ್ಟು ಜನಸಮುದಾಯದ ವಿಶಾಲಕ್ಷೇತ್ರಕ್ಕೆ ಅನ್ವಯಿಸುವ ವಿದ್ಯಮಾನವಾಗಿರುವುದಿಲ್ಲ.
"ಬುದ್ಧಿವಂತರಲ್ಲಿ ಸಮಾನಾಭಿಪ್ರಾಯಗಳು ಬೇಕಾದಷ್ಟು ಬರುತ್ತವೆ. ಆದರೆ ವಿದ್ವಾಂಸನಾದವನು ಅವೆಲ್ಲವೂ ಒಂದೇ ಎಂದು ತಿಳಿಯಬಾರದು" ಎನ್ನುವ `ಧ್ವನ್ಯಾಲೋಕ'ದ ಮಾತು ಸಾಹಿತ್ಯಲೋಕದಲ್ಲಿ ವ್ಯಕ್ತಿಸ್ವಾತಂತ್ರ್ಯದ, ಅಭಿಪ್ರಾಯಸ್ವಾತಂತ್ರ್ಯದ ಸಂದರ್ಭಗಳಲ್ಲಿ ನಡೆಯಬಹುದು. ತರ್ಕ, ವಿಚಾರ, ಸತ್ಯನಿಷ್ಠೆ ಇವು ವಿಚಾರ ವಿಮರ್ಶೆಗಳಿಗೆ, ವಿದ್ವದುದ್ಯಮಗಳಿಗೆ ಮುಖ್ಯ ಎಂಬುದು ಇಲ್ಲಿಯ ಆಶಯ. ಈ ವಿಷಯದಲ್ಲಿ ವಿದೇಶದ ಬ್ರೊನೊವ್ಸ್ಕಿ ಎಂಬ ವಿದ್ವಾಂಸರೊಬ್ಬರ ಮಾತನ್ನು ಇಲ್ಲಿ ಉದ್ಧರಿಸಬಹುದಾಗಿದೆ. ಈ ಮಾತನ್ನು ಹಲವು ವರ್ಷಗಳ ಹಿಂದೆ ಪು.ತಿ. ನರಸಿಂಹಾಚಾರ್ಯರು ನನ್ನ ಗಮನಕ್ಕೆ ತಂದರು.
ಃಥಿ ಣhe ತಿoಡಿಟಜಟಥಿ sಣಚಿಟಿಜಚಿಡಿಜs oಜಿ ಠಿubಟiಛಿ ಟiಜಿe ಚಿಟಟ sಛಿhoಟಚಿಡಿs iಟಿ ಣheiಡಿ ತಿoಡಿಞ ಚಿಡಿe oಜಿಛಿouಡಿse oಜಜಟಥಿ viಡಿಣuous. ಖಿheಥಿ ಜo ಟಿoಣ mಚಿಞe ತಿiಟಜ ಛಿಟಚಿims. ಖಿheಥಿ ಜo ಟಿoಣ ಛಿheಚಿಣ. ಖಿheಥಿ ಜo ಟಿoಣ ಣಡಿಥಿ ಣo ಠಿeಡಿsuಚಿಜe ಚಿಣ ಚಿಟಿಥಿ ಛಿosಣ. ಖಿheಥಿ ಚಿಠಿಠಿeಚಿಟ ಟಿeiಣheಡಿ ಣo ಠಿಡಿeರಿuಜiಛಿe ಟಿoಡಿ ಚಿuಣhoಡಿiಣಥಿ. ಖಿheಥಿ ಚಿಡಿe oಜಿಣeಟಿ ಜಿಡಿಚಿಟಿಞ ಚಿbouಣ ಣheiಡಿ igಟಿoಡಿಚಿಟಿಛಿe. ಖಿheiಡಿ ಜisಠಿuಣes ಚಿಡಿe ಜಿಚಿiಡಿಟಥಿ ಜeಛಿoಡಿus. ಖಿheಥಿ ಜo ಟಿoಣ ಛಿoಟಿಜಿuse ತಿhಚಿಣ is beiಟಿg ಚಿಡಿgueಜ ತಿiಣh ಡಿಚಿಛಿe, ಠಿoಟiಣiಛಿs, sex oಡಿ ಚಿge. ಖಿheಥಿ ಟisಣeಟಿ ಠಿಚಿಣieಟಿಣಟಥಿ ಣo ಣhe ಥಿouಟಿg ಚಿಟಿಜ ಣo ಣhe oಟಜ ತಿho boಣh ಞಟಿoತಿ eveಡಿಥಿಣhiಟಿg. ಖಿhese ಚಿಡಿe ಣhe geಟಿeಡಿಚಿಟ viಡಿಣues oಜಿ sಛಿhoಟಚಿಡಿshiಠಿ ಚಿಟಿಜ ಣheಥಿ ಚಿಡಿe ಠಿeಛಿuಟiಚಿಡಿಟಥಿ ಣhe viಡಿಣues oಜಿ sಛಿieಟಿಛಿe.
ಸಾರ್ವಜನಿಕಜೀವನದಲ್ಲಿ ಸಾಮಾನ್ಯವಾಗಿ ಅನುಸರಿಸುವ ಯೋಗ್ಯತಾನಿರ್ಣಯಕ್ಕೆ ಅನುಗುಣವಾಗಿ ಎಲ್ಲ ವಿದ್ವಾಂಸರೂ ತಂತಮ್ಮ ಕ್ಷೇತ್ರಗಳಲ್ಲಿ ಒಂದು ವಿಲಕ್ಷಣರೀತಿಯಲ್ಲಿ ಋಜುಬುದ್ಧಿಯುಳ್ಳವರು ಎಂಬುದು ನಿಜ. ತಮ್ಮ ಸಾಧನೆಗಳ ಬಗ್ಗೆ ಅವರು ದೊಡ್ಡದಾಗಿ ಹೇಳಿಕೊಳ್ಳುವುದಿಲ್ಲ. ಅವರು ವಂಚಿಸುವುದಿಲ್ಲ. ತಾವು ಹೇಳುವುದನ್ನು ಬೇರೆಯವರು ಒಪ್ಪುವ ಹಾಗೆ ಮಾಡಬೇಕೆಂದು ಹೇಗೋ ಪ್ರಯತ್ನಿಸುವುದಿಲ್ಲ. ಇನ್ನೊಬ್ಬನಿಗೆ ಇದು ಇಷ್ಟ, ಇದು ಅನಿಷ್ಟ ಎಂದೋ, ಅಧಿಕಾರಕ್ಕೆ ಮಣಿದೋ ವರ್ತಿಸುವುದಿಲ್ಲ. ತಮಗೆ ತಿಳಿಯದ ವಿಷಯದಲ್ಲಿ ಅವರಿಗೆ ಮುಚ್ಚುಮರೆಯಿಲ್ಲ. ಅವರ ಭಿನ್ನಾಭಿಪ್ರಾಯಗಳು ಬಹಳಮಟ್ಟಿಗೆ ಗಾಂಭೀರ್ಯದಿಂದ ಕೂಡಿದವು. ಅವರು ವಾದಸರಣಿಯನ್ನು ಜನಾಂಗ ರಾಜಕೀಯ ಲಿಂಗ ಅಥವಾ ವಯಸ್ಸು ಇವನ್ನು ಹಿಡಿದು ದಾರಿತಪ್ಪಿಸುವುದಿಲ್ಲ. ತಿಳಿದವರು ಚಿಕ್ಕವರಿರಲಿ ದೊಡ್ಡವರಿರಲಿ, ಅವರು ಹೇಳುವುದನ್ನು ತಾಳ್ಮೆಯಿಂದ ಕೇಳುತ್ತಾರೆ. ಇದು ವಿದ್ವತ್ತೆಯ ಸಾಮಾನ್ಯ ಲಕ್ಷಣಗಳು; ಸ್ವಾರಸ್ಯವೆಂದರೆ, ಇವೇ ವಿಜ್ಞಾನದ ಲಕ್ಷಣಗಳು ಕೂಡ.
ಈ ವಾಕ್ಯಪುಂಜದ ಆಶಯವನ್ನು ನಾನು ವ್ಯಾಖ್ಯಾನಿಸುವುದಿಲ್ಲ. ತಮ್ಮ ವಿವೇಚನೆಗೇ ಬಿಡುತ್ತೇನೆ.
ಇದನ್ನು ಇನ್ನೂ ಸೂತ್ರಪ್ರಾಯವಾಗಿ, 1150 ವರ್ಷಗಳಿಗೂ ಹಿಂದೆಯೇ ನಮ್ಮ ಭಾಷೆಯ, ನಮ್ಮ ನಾಡಿನ ಹೆಮ್ಮೆಯ ಕೃತಿ `ಕವಿರಾಜಮಾರ್ಗ'ದ ಮುಂದಿನ ಕಂದಪದ್ಯದಲ್ಲಿ ಕಾಣಬಹುದಾಗಿದೆ: ಇದು ಸಮಾಜಕ್ಕೂ ಸಾಹಿತಿಗೂ ಸಮಾನವಾಗಿ ಅನ್ವಯಿಸುವ ಹಿತೋಕ್ತಿ.
ಕಸವರಮೆಂಬುದು ನೆ¾õÉ ಸೈ
ರಿಸಲಾರ್ಪೊಡೆ ಪರವಿಚಾರಮನ್ ಧರ್ಮಮುಮನ್
ಕಸವೇನ್ ಕಸವರಮೇನು
ಬ್ಬಸಮನ್ ಬಸಮಲ್ಲದಿರ್ದು ಮಾಡುವುವೆಲ್ಲಮ್ ||
ಅನ್ಯರ ವಿಚಾರವನ್ನು, (ಅನ್ಯರ) ಧರ್ಮವನ್ನು ಕೂಡ, ಪೂರ್ಣವಾಗಿ (ಅಂತಃಕರಣ ಪೂರ್ವಕವಾಗಿ) ಸಹಿಸುವುದು ಸಾಧ್ಯವಾದರೆ, (ಅದನ್ನು) ಸಂಪತ್ತು ಎನ್ನಬೇಕು. (ಹಾಗಲ್ಲದಿದ್ದರೆ), ಕಸವೇನು ಕಸವರವೇನು? (ಎರಡೂ ಒಂದೇ). ಅವೆಲ್ಲ ಬಹುವಾಗಿ ಹಿಂಸೆಮಾಡುತ್ತವೆ.
ಈ ಪದ್ಯದ ಆಶಯವನ್ನೂ ನಾನು ವ್ಯಾಖ್ಯಾನಿಸುವುದಿಲ್ಲ. ತಮ್ಮ ವಿವೇಚನೆಗೇ ಬಿಡುತ್ತೇನೆ.
ಈಗ್ಗೆ ಕೆಲವು ವರ್ಷಗಳಿಂದ ನಮ್ಮ ಸಮಾಜಜೀವನ ಮತ್ತು ಸಾಹಿತ್ಯಕೃಷಿ ಎರಡರ ನಡುವೆ, ಅನ್ಯೋನ್ಯವಾಗಿ ಸಂಬಂಧವಿರಬೇಕಾದ್ದು ಸಡಿಲಗೊಳ್ಳುತ್ತ, ಸಂಘರ್ಷದ ತೀವ್ರತೆ ಕಾಣುತ್ತಿದೆ. ಇದು ವೈಚಾರಿಕಸಂವಾದವಾಗಿ ಉಳಿಯದೆ, ಸಂಘರ್ಷವಾಗಿ ಆಘಾತಕಾರಿ ಪರಿಣಾಮಗಳಿಗೆ ದಾರಿಮಾಡುತ್ತಿದೆ. ಸಮಾಜ ಒಂದು ಶಿಕ್ಷಿತ-ಅಶಿಕ್ಷಿತ, ವಿವೇಕಿ-ಅವಿವೇಕಿ ಜನರ ಕೂಟ. ಸಮಾಜ ಹರಿಯುವ ಹುಚ್ಚುಹೊಳೆ; ಸಾಹಿತ್ಯರಚನೆ ಕಟ್ಟಿದ ಕೆರೆ. ಹೊಳೆಯ ನೀರು ಕೆರೆಯ ಕಟ್ಟೆಯನ್ನು ಕೊಚ್ಚಿಹಾಕದ ಹಾಗೆ ನೋಡಿಕೊಳ್ಳ ಬೇಕು. ಈ ದಿಕ್ಕಿನಲ್ಲಿ ನಮ್ಮ ವ್ಯಕ್ತಿ-ಅಭಿವ್ಯಕ್ತಿ ಸ್ವಾತಂತ್ರ್ಯಗಳ ಮಿತಿಮೇರೆಗಳನ್ನು ಗುರುತಿಸ ಬೇಕಾಗಿದೆ. ದೇಶದ ಸಂವಿಧಾನ, ಕಾನೂನಿನ ಕಟ್ಟುಕಟ್ಟಳೆಗಳು, ನೈತಿಕಪ್ರಜ್ಞೆ, ಆತ್ಮಸಾಕ್ಷಿ, ಪರವಿಚಾರ ಪರಧರ್ಮಗಳ ಬಗೆಗೆ ಸಹಿಷ್ಣುತೆ, ಯುಕ್ತಾಯುಕ್ತವಿವೇಚನೆ, ಪರಿಣಾಮ ಪರಂಪರೆ ಎಲ್ಲವೂ ಎಚ್ಚರದಿಂದ ಗಮನಿಸಬೇಕಾದುವೇ.
ಈಚಿನ ಕೆಲವು ವರ್ಷಗಳಲ್ಲಿ ನಡೆದಿರುವ ಬುದ್ಧಿಜೀವಿಗಳ, ವಿಚಾರವಾದಿಗಳ, ಸಾಹಿತಿಗಳ ಮೇಲಣ ಹಲ್ಲೆಗಳು ಅತ್ಯಂತ ದುಃಖಕರ; ಖಂಡನಾರ್ಹ, ಶಿಕ್ಷಾರ್ಹ. ಅನ್ಯಾಯವಾಗಿ ಈಚೆಗೆ ನಮ್ಮ ನಡುವಿನ ಕ್ರಿಯಾಶಾಲಿ ಸಂಶೋಧಕಮಿತ್ರ ಎಂ.ಎಂ. ಕಲಬುರ್ಗಿಯವರನ್ನು ನಾವು ಕಳೆದುಕೊಂಡೆವು.

ಇನ್ನು ನದಿನೀರಿನ ಸಮಸ್ಯೆ. ಇಲ್ಲಿಯೂ ಹೋರಾಟದಲ್ಲಿ ತಮಿಳುನಾಡು ಸಾಮಾನ್ಯವಾಗಿ ಗೆಲವು ಸಾಧಿಸುತ್ತ, ಕಾವೇರಿ ನದಿಯ ನೀರಿನ ಹಂಚಿಕೆ ವಿವಾದವಾಗಿಯೇ ಉಳಿದಿದೆ. ಉತ್ತರಕರ್ನಾಟಕ ಭಾಗದಲ್ಲಿ ಮಹದಾಯಿ-ಮಲಪ್ರಭಾ ನದಿಗಳ ಕಳಸಾ-ಬಂಡೂರಿ ನಾಲೆಗಳ ಸಂಬಂಧದಲ್ಲಿ ರಾಜ್ಯಗಳ ನಡುವೆ ತಿಕ್ಕಾಟವಿದೆ. ಮಧ್ಯ ಮತ್ತು ದಕ್ಷಿಣ ಕರ್ನಾಟಕದಲ್ಲಿ ಬಯಲುಸೀಮೆಯ ಕೆಲವು ಜಲಾಭಾವದ ಜಿಲ್ಲೆಗಳಿಗೆ ನೀರಿನ ಹರಿವು-ನೇತ್ರಾವತಿಯ ಕೆಲವು ಉಪನದಿಗಳ ನೀರಿನ ಬಳಕೆ ಎಂಬುದರ ಸಂಬಂಧದಲ್ಲಿ ಚಳವಳಿಗಳು ನಡೆಯುತ್ತಿವೆ. ಪರಿಸರಸಂರಕ್ಷಣೆಯ ನ್ಯಾಯವಾದ ನಿಲವಿನಲ್ಲಿ ಪರಿಸರವಾದಿಗಳೂ ಹೋರಾಟದ ಕಣದಲ್ಲಿದ್ದಾರೆ. ನಮ್ಮ ದೇಶದಲ್ಲಿ ಜಲಸಂಪನ್ಮೂಲಗಳಿಗೆ ಕೊರತೆಯಿಲ್ಲ, ಆದರೆ ಬಳಕೆಯಲ್ಲಿ ವಿಚಕ್ಷಣೆಯಿಲ್ಲದ್ದೇ ತೊಂದರೆಗಳಿಗೆ ಕಾರಣವೆಂದು ಪರಿಣತರು ಹೇಳುತ್ತಾರೆ; ರಾಷ್ಟ್ರೀಯ ಜಲನೀತಿ ಮತ್ತು ನದಿಗಳ ರಾಷ್ಟ್ರೀಕರಣ ಪರಿಹಾರವೆನ್ನುತ್ತಾರೆ, ಹಾಗಲ್ಲದೆ ನ್ಯಾಯಮಂಡಲಿಗಳೂ ಆಯೋಗಗಳೂ ಮಾಡುವ ಶಿಫಾರಸುಗಳೂ ನಿರ್ದೇಶನಗಳೂ ರಾಜ್ಯ ರಾಜ್ಯಗಳ ನಡುವೆ ತೃಪ್ತಿ ತರಲಾರವು ಎನ್ನುತ್ತಾರೆ. ಪರಿಸರತಜ್ಞರೂ ನೀರಾವರಿ ವಿಭಾಗದ ವಿಜ್ಞಾನಿಗಳೂ ರಾಜಕೀಯಸ್ಥರೂ ಜನರ ಸಹಕಾರ ಪಡೆದು ಎಲ್ಲರಿಗೂ ಸಮಾಧಾನವಾಗುವಂತೆ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ; ಅದಕ್ಕೆ ತಕ್ಕ ಮಾತುಕತೆಗಳಿಗೆಂದು ವೇದಿಕೆಗಳಿವೆ.
ಮಾನ್ಯರೆ, ನನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಿದ ತಮಗೆಲ್ಲರಿಗೂ ನನ್ನ ವಂದನೆಗಳು. ಮುಂದೆ ನಡೆಯಲಿರುವ ವಿಚಾರಗೋಷ್ಠಿಗಳೂ ಸಾಂಸ್ಕøತಿಕ ಸಾಂದರ್ಭಿಕ ಗೋಷ್ಠಿಗಳೂ ಫಲಪ್ರದವಾಗಿ, ಸ್ವಾರಸ್ಯಕರವಾಗಿ ಜರುಗಲಿ ಎಂದು ಹಾರೈಸುತ್ತೇನೆ. ನಮಸ್ಕಾರಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ